Monday, October 12, 2009

ನೀರಲ್ಲೇ ನಿಲ್ಲಲಾಗದ ಸ್ಥಿತಿಯಲ್ಲಿ...

‘ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ’ ಎಂಬ ಗಾದೆ ಮಾತೊಂದಿದೆ. ಬಹುಶಃ ಆಧುನಿಕ ಜಗತ್ತು ಕೆಲವು ಸಂದರ್ಭಗಳಲ್ಲಿ ಈ ಮಾತನ್ನು ಸುಳ್ಳುಮಾಡಿದೆ ಎನ್ನುವುದು ನನ್ನ ಅಭಿಪ್ರಾಯ. ಕಾರಣ, ‘ಹರಿಯೋ ನೀರಿಗೆ ದೊಣ್ಣೆನಾಯಕನ ಅಪ್ಪಣೆಯೇ’ ಎನ್ನುವ ಗಾದೆ ಮಾತು ನಮ್ಮಲ್ಲಿ ಚಾಲ್ತಿಯಲ್ಲಿದೆ ಆದರೆ ಈ ಮಾತು ಈಗ ಸುಳ್ಳಾಗಿದೆ ಎನಿಸತೊಡಗಿದೆ. ಇದನ್ನು ಕೆಲವರು ಒಪ್ಪಬಹುದು ಒಪ್ಪದೆಯೂ ಇರಬಹುದು. ಹರಿಯೋ ನೀರಿಗೆ ದೊಣ್ಣೆನಾಯಕನ ಅಪ್ಪಣೆಯೇ ಎಂದು ಕೇಳಿದರೆ ಈಗ ಹೌದು ಎನ್ನುವ ಕಾಲ ಬಂದಿದೆ. ಜಾಗತೀಕರಣದ ಒಂದು ಭಾಗವಾದ ಖಾಸಗೀಕರಣ. ಇದರಿಂದ ಹರಿಯುವ ನೀರು, ಬೀಸುವಗಾಳಿ, ನಿಂತ ನೆಲ, ನಮ್ಮ ದೇಶಿ ಸಂಸ್ಕೃತಿ ಎಲ್ಲವೂ ವ್ಯಾಪಾರದ ಸರಕುಗಳಾಗಿವೆ. ಒಟ್ಟು ಭೂ ಮಂಡಲದ ಎರಡನೇ ಮೂರು ಭಾಗ ಸಾಗರದಿಂದ ಆವೃತವಾಗಿದೆ (ಶೇ. ೭೧ ಭಾಗ) ಆದರೂ ಸಾಗರದ ತಾಪಮಾನ ಶೇ. ೫೦ ರ ಪ್ರಮಾಣದಲ್ಲಿ ಹೆಚ್ಚುತ್ತಿದೆ. ನೀರೇ ಆವರಿಸಿದ್ದರೂ ಇಡೀ ಜಗತ್ತು ನೀರಿನ ಸಮಸ್ಯೆ ಎದುರಿಸುತ್ತಿದೆ ಇದೇ ಮನುಷ್ಯ ಮತ್ತು ಪ್ರಕೃತಿಯ ನಡುವೆ ಏರ್ಪಟ್ಟಿರುವ ಸಂಬಂಧ ಮತ್ತು ಸಂಘರ್ಷದ ಕೊಂಡಿ.
ಆಹಾರವಿಲ್ಲದೆ ಮನುಷ್ಯ ಬದುಕಲಾರ ಎಂದು ನಾವು ಹೇಗೆ ಸರಳವಾಗಿ ಹೇಳಿ ಬಿಡುತ್ತೇವೆಯೋ ಹಾಗೆಯೇ ನೀರು, ಗಾಳಿ ಇಲ್ಲದೆಯೂ ಬದುಕಲಾರ. ಆದರೂ ನಾವು ನಿಂತ ನೆಲವನ್ನು, ಕುಡಿಯುವ ನೀರನ್ನು ಉಸಿರಾಡುವ ಗಾಳಿಯನ್ನು ಕಲುಷಿತಗೊಳಿಸಿದ್ದೇವೆ ಅದನ್ನು ಶುದ್ಧಗೊಳಿಸಲು ಈಗ ಹರಸಾಹಸ ಮಾಡುತ್ತಿದ್ದೇವೆ. ಕುಡಿಯುವ ನೀರಿಗಾಗಿ ಈಗ ನದಿ ಜೋಡಣೆಯಂಥ ಭಾರೀ ವೆಚ್ಚದ ಯೋಜನೆಗೆ ಚರ್ಚೆ ನಡೆಯುತ್ತಿವೆ. ನದಿಯ ದಿಕ್ಕುಗಳನ್ನೇ ಬದಲಿಸುವ, ಅದರಿಂದ ಎಲ್ಲರಿಗೂ ನೀರು ನೀಡುವ ಇದು ಈಗ ಬೇಕು ಬೇಡಗಳ ವಿಷಯವಾಗಿದೆ.
ಜನಸಂಖ್ಯೆ ಬೆಳವಣಿಗೆಯಿಂದ ನೀರು ಮತ್ತು ಆಹಾರಕ್ಕಾಗಿ ನದಿ ಜೋಡಣೆ ಅನಿವಾರ್ಯವೆಂದು ಹೇಳಲಾಗುತ್ತದೆಯಾದರೂ ಈ ಕ್ರಮದಿಂದ ನದಿ ಪಾತ್ರಗಳೇ ಬತ್ತಿಹೋಗುವ ಅಪಾಯವನ್ನೂ ಪರಿಗಣಿಸಬೇಕು. ಪ್ರಕೃತಿ ಸಂಪತ್ತು ಮುಗಿದು ಹೋಗದಂತೆ ಕಾಯ್ದುಕೊಂಡರೆ ಮುಂದಿನ ತಲೆಮಾರು ಉಸಿರಾಡುತ್ತದೆ ಇಲ್ಲವಾದರೆ ಭವಿಷ್ಯ ಭಯಾನಕವಾಗುತ್ತದೆ ಎಂಬ ಎಚ್ಚರ ಅತ್ಯಗತ್ಯ. ಪ್ರಕೃತಿ ಮನುಷ್ಯನ ಆಸೆಗಳನ್ನು ತೀರಿಸುವಷ್ಟು ಶಕ್ತವಾಗಿದೆಯೇ ಹೊರತು ದುರಾಸೆಗಳನ್ನಲ್ಲ ಆದ್ದರಿಂದ ನದಿ ಜೋಡಣೆ ಕ್ರಮ ಎನ್ನುವುದು ದುರಾಶೆಯ ಫಲದಂತೆ ಗೋಚರಿಸುತ್ತಿದೆ. ವಿಜ್ಞಾನಿಗಳು, ಪರಿಸರವಾದಿಗಳು, ತಂತ್ರಜ್ಞರು ಈ ಯೋಜನೆಯನ್ನು ತೀವ್ರವಾಗಿ ವಿರೋಸುತ್ತಲೇ ಬಂದಿದ್ದಾರೆ.
ಅಲ್ಲಲ್ಲಿ ಡ್ಯಾಂಗಳನ್ನು ನಿರ್ಮಿಸಿದ್ದರಿಂದ ಕೆಲವು ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಅರಣ್ಯ ಮುಳುಗಡೆಯೇ ಇದಕ್ಕೆ ಮುಖ್ಯ ಕಾರಣ ಎಂದು ಪರಿಸರ ವಿಜ್ಞಾನಿಗಳು ಹೇಳುತ್ತಿದ್ದಾರೆ. ಆದರೂ ಅಣೆಕಟ್ಟು ಕಟ್ಟುವ ಯೋಜನೆಗಳು ನಡೆಯುತ್ತಲೇ ಇವೆ. ಮಳೆಗಾಲದಲ್ಲಿ ಉತ್ತರ ಭಾರತದ ಕೆಲವು ನದಿಗಳಲ್ಲಿ ಪ್ರವಾಹ ಬಂದು ಅನೇಕ ನಗರಗಳಿಗೆ ನೀರು ನುಗ್ಗಿ ಪ್ರಾಣ, ಆಸ್ತಿ ಹನಿ ಸಂಬವಿಸುತ್ತಿದೆ ಆದ್ದರಿಂದ ಅವುಗಳನ್ನೆಲ್ಲ ಜೋಡಿಸಿದರೆ ದಕ್ಷಿಣ ಭಾಗದ ಒಣ ಭೂಮಿ ಹಸಿರಾಗುತ್ತಿದೆ ಎಂದರೂ ಹೇಳಿದಷ್ಟು ಸುಲಭವಾಗಿಲ್ಲ ಈ ಕಾರ್ಯ.
ನಮ್ಮ ಸಂಸ್ಕೃತಿಯಲ್ಲಿ ನದಿಗಳಿಗೆ ಪೂಜ್ಯ ಸ್ಥಾನವಿದೆ. ಅವು ನಮಗೆ ನೀರೊದಗಿಸುವ ಕಾಲುವೆಗಳು ಮಾತ್ರವಲ್ಲ, ಅಥವಾ ಮಳೆನೀರನ್ನು ಸಂಗ್ರಹಿಸಿ ಸಮುದ್ರಕ್ಕೆ ತಲುಪಿಸುವ ಯಂತ್ರಗಳೂ ಅಲ್ಲ. ನದಿಗಳು ನಮ್ಮ ನಾಗರಿಕತೆಯ ತೊಟ್ಟಿಲುಗಳು. ಚರಿತ್ರೆ ಪುರಾಣಗಳನ್ನು ತೆಗೆದುನೋಡಿದರೆ ಸಿಂದೂ ನಾಗರಿಕತೆಯಿಂದ ಇಲ್ಲಿಯವರೆಗೆ ಬೆಳೆದುಬಂದ ಎಲ್ಲ ನಾಗರಿಕತೆಯ ಚರಿತ್ರೆಯೂ ನದಿಗಳ ದಡದಲ್ಲೇ ತೆರೆದುಕೊಳ್ಳುತ್ತದೆ. ಆದ್ದರಿಂದ ಈ ನದಿಗಳ ದಿಕ್ಕು ಬದಲಿಸುವುದು ಎಂದರೆ ನಾಗರಿಕತೆಯ ದಿಕ್ಕು ಬದಲಿಸುವುದು ಎಂದೇ ಭಾವಿಸಬೇಕು. ನದಿ ಜೋಡಣೆಯಿಂದಾಗುವ ಲಾಭದ ಬಗ್ಗೆ ಮಾತ್ರ ಸರ್ಕಾರಗಳು ಜನರಿಗೆ ತಿಳಿಸುತ್ತವೆ ಆದರೆ ಅದರಿಂದಾಗುವ ಅಪಾಯಗಳನ್ನು ಕುರಿತು ಉಸಿರೆತ್ತುತ್ತಿಲ್ಲ. ಯಾವುದೇ ಬೃಹತ್ ಯೋಜನೆಗಳಿಂದಲೂ ಅನ್ಯಾಯಕ್ಕೊಳಗಾಗುವವರು ಜನಸಾಮಾನ್ಯರೆ ಆದ್ದರಿಂದ ಸರ್ಕಾರ ಇಂಥ ವಿಚಾರಗಳಲ್ಲೂ ತಪ್ಪು ಮಾಹಿತಿ ಅಥವಾ ಅರ್ಧಮಾಹಿತಿ ನೀಡುವಂಥ ನೀಚ ಕೃತ್ಯಕ್ಕೆ ಮುಂದಾದ ನೂರಾರು ಉದಾಹರಣೆಗಳಿವೆ.
ಮಾಹಿತಿ ಮುಚ್ಚಿಡುವ ಸರ್ಕಾರಗಳು:
ಹಿರಾಕುಡ್ ಅಣೆಕಟ್ಟು ನಿರ್ಮಿಸಿದಾಗ ಸರ್ಕಾರದ ದಾಖಲೆಗಳಲ್ಲಿ ನಮೂದಾದ ನಿರಾಶ್ರಿತರ ಸಂಖ್ಯೆ ೧.೧ ಲಕ್ಷ. ವಾಸ್ತವದಲ್ಲಿ ಸ್ಥಳಾಂತರಗೊಂಡವರು ೧.೮ ಲಕ್ಷ ಜನ. ಅಂದರೆ ೭೦ ಸಾವಿರ ಜನರ ಬಗ್ಗೆ ಸರ್ಕಾರ ಸುಳ್ಳು ಮಾಹಿತಿ ನೀಡಿತ್ತು. ಪಶ್ಚಿಮ ಮಧ್ಯಪ್ರದೇಶದಲ್ಲಿ ನರ್ಮದಾ ನದಿಗೆ ನಿರ್ಮಿಸಲಾದ ಬಾರ್ಗಿ ಜಲಾಶಯದ ಜಾಗದಲ್ಲಿ ಮುಳುಗಡೆಯಾದ ಹಳ್ಳಿಗಳ ಸಂಖ್ಯೆ ೧೬೨ ಆದರೆ ಸರ್ಕಾರ ಹೇಳಿದ್ದು ಕೇವಲ ೧೦೦. ಇಲ್ಲಿ ೬೨ ಹಳ್ಳಿಗಳನ್ನು ಸರಕಾರದ ದಾಖಲೆಗಳು ನುಂಗಿ ಹಾಕಿದ್ದವು. ಇವು ಮೇಲ್ನೋಟಕ್ಕೆ ಸಿಗುವ ಅಂಕಿ ಅಂಶಗಳು ಹಳ್ಳಿಗಳ ಜನ- ಜಾನುವಾರು ವಸತಿಗಳ ಬಗ್ಗೆ ಮಾಹಿತಿ ಸಿಗುವುದಿಲ್ಲ. ಮುಳುಗಿ ಹೋಗುವ ಅರಣ್ಯ,ಫಲವತ್ತಾದ ಕೃಷಿ ಭೂಮಿ. ಬೆಳೆ ಇಲ್ಲದೆ ದೇಶದ ಆಹಾರ ಭದ್ರತೆಮೇಲೆ ಬೀರಿದ ಪರಿಣಾಮ ಮುಂತಾದವುಗಳು ಇಲ್ಲಿ ಚರ್ಚಿತ ವಿಷಯವೇ ಆಗುವುದಿಲ್ಲ. ೧೯೮೦ ರಲ್ಲಿ ನರ್ಮದಾ ನದಿಗೆ ಸರ್ದಾರ್ ಸರೋವರ ಅಣೆಕಟ್ಟೆ ಕಟ್ಟಲು ಯೋಜನೆ ರೂಪಿಸಲಾಯಿತು. ಇದರಿಂದ ೫೦ ಲಕ್ಷ ಎಕರೆ ಭೂಮಿಗೆ ನೀರು, ೧೪೫೦ ಮೆಗಾ ವ್ಯಾಟ್ ವಿದ್ಯುತ್, ೮೦೦ ಹಳ್ಳಿ ಮತ್ತು ೧೩೫ ಪಟ್ಟಣಗಳಿಗೆ ಕುಡಿಯುವ ನೀರೊದಗಿಸುವ ಉದ್ದೇಶ ಸರಕಾರದ್ದು. ಇದು ೯೧, ಸಾವಿರ ಎಕರೆ ಕೃಷಿ ಭೂಮಿಯನ್ನು ಮುಳುಗಿಸಿತು ಜತೆಗೆ ೨೮,೦೦೦ ಎಕರೆ ಕಾಡನ್ನೂ ನುಂಗಿತು. ಇದರಿಂದ ಒಂದು ಮಿಲಿಯನ್ ಜನರು ಅನಿವಾರ್ಯವಾಗಿ ಸ್ಥಳಾಂತರಗೊಳ್ಳುತ್ತಾರೆ. ಮಧ್ಯ ಪ್ರದೇಶದ ಪೂರ್ವ ನಿಮಾರ್‌ನಲ್ಲಿ ಇದೇ ನದಿಗೆ ‘ನರ್ಮದಾ ಸಾಗರ್’ ಅಣೆಕಟ್ಟು ನಿರ್ಮಿಸಲಾಗುತ್ತಿದೆ ಇದರಿಂದಲೂ ಕೂಡ ೨೪೯ ಹಳ್ಳಿಗಳನ್ನು ಮುಳುಗಿಸಿ ೪೦ ಸಾವಿರ ಕುಟುಂಬಗಳನ್ನು ಹೊರಹಾಕುತ್ತದೆ ಇವೆಲ್ಲವನ್ನೂ ಅಭಿವೃದ್ಧಿ ಎಂದು ವ್ಯಾಖ್ಯಾನಿಸುವವರು ಅದರ ಸಾಧಕ ಬಾಧಕಗಳನ್ನು ಕುರಿತು ಗಂಭೀರ ಚರ್ಚೆ ಮಾಡಬೇಕು. ಹಳ್ಳಿಗಳ ಪಲ್ಲಟ ಎಂದರೆ ಒಂದು ಭಾವನಾತ್ಮಕ ಬದುಕಿನ ಪಲ್ಲಟ, ಪರಂಪರೆಯ ಪಲ್ಲಟ. ಇಂಥ ಸಂದರ್ಭಗಳಲ್ಲಿ ನಮ್ಮ ಪುನರ್ವಸತಿ ನೀತಿಯನ್ನು ಸರಿಮಾಡಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಸರಕಾರ ವಸತಿ ಕಿತ್ತುಕೊಂಡು ಬಡವರನ್ನು ಬಯಲಿನಲ್ಲಿ ನಿಲ್ಲಿಸಿದಂತಾಗುತ್ತದೆ.
ಇವೆಲ್ಲವುಗಳನ್ನು ಇಲ್ಲಿ ಪ್ರಸ್ತಾಪಿಸಿದ್ದಕ್ಕೆ ಕಾರಣ ಅಣೆಕಟ್ಟುಗಳನ್ನು ನಿರ್ಮಿಸುವಾಗಲೇ ಇಷ್ಟೊಂದು ಅವಘಡಗಳು ಸಂಭವಿಸುತ್ತವೆ. ಅಂದರೆ ನದಿ ಜೋಡಣೆಯಂಥ ಭಾರೀ ಯೋಜನೆಗಳನ್ನು ಸರಕಾರಗಳು ಕೈಗೆತ್ತಿಕೊಂಡರೆ ನಡೆಯುವ ಜನಪಲ್ಲಟಗಳು ಹೇಗಿರುತ್ತವೆ ಎಂಬುದನ್ನು ಊಹಿಸಲೂ ಅಸಾಧ್ಯ. ಅದೂ ಅಲ್ಲದೆ ಭಾರತದಂಥ ಬಡವರಿಂದ ತುಂಬಿರುವ ದೇಶದಲ್ಲಿ ಈಗಾಗಲೇ ವಸತಿ ಸಮಸ್ಯೆ ಕಾಡುತ್ತಿದೆ. ಕೈಗಾರಿಕೆಯಿಂದ ಸ್ಥಳಾಂತರಗೊಳ್ಳುತ್ತಿರುವ ಜನರಿಗೇ ಪುನರ್‌ವಸತಿ ಕಲ್ಪಿಸಲಾಗದೇ ಘರ್ಷಣೆಗಳು ನಡೆದಿವೆ ಅಂದರೆ ನದಿಜೋಡಣೆಯಿಂದಾಗುವ ಅಲ್ಲೋಲ ಕಲ್ಲೋಲಗಳನ್ನು ಗಂಭೀರವಾಗಿ ಯೋಚಿಸಬೇಕಾಗಿದೆ.
ಆರ್ಥಿಕ ಸವಾಲುಗಳು:
೨೦೦೨ರಲ್ಲಿ ಈ ನದಿ ಜೋಡಣೆ ಯೋಜನೆಗೆ ೫,೬೦,೦೦೦ ಕೋಟಿ ರೂ.ಗಳು ಎಂದು ಅಂದಾಜು ಮಾಡಲಾಗಿತ್ತು. ಅಂದರೆ ೧೧೨ ಶತಕೋಟಿ ಅಮೆರಿಕನ್ ಡಾಲರ್‌ಗಳು. ಸಾಮಾನ್ಯವಾಗಿ ನಮ್ಮ ಯೋಜನೆಗಳು ಯಾವಾಗಲೂ ಮೊದಲ ಅಂದಾಜಿನ ಹಣದಲ್ಲಿ ಮುಗಿಯುವುದಿಲ್ಲ, ಹಾಗೆ ಮುಗಿದ ಉದಾಹರಣೆಗಳೂ ಇಲ್ಲ. ಅದು ಮುಗಿಯುವ ಹೊತ್ತಿಗೆ ೨೦೦ ಶತಕೋಟಿ ಡಾಲರ್‌ಗಳಾಗಬಹುದು ಅಥವಾ ಅದನ್ನೂ ದಾಟಬಹುದು ಎಂದು ಹೇಳಲಾಗಿತ್ತು. ಈ ಯೋಜನೆಯ ವೆಚ್ಚದ ಅಂದಾಜುಪಟ್ಟಿ ತಯಾರಿಸಿ ಎಂಟು ವರ್ಷಗಳು ಮುಗಿಯುತ್ತ ಬಂದಿದ್ದರಿಂದ ಅದರ ವೆಚ್ಚ ೪೦೦ ಶತಕೋಟಿ ಡಾಲರ್ ತಲುಪಬಹುದು ಎನ್ನಲಾಗುತ್ತಿದೆ. ಇದು ಅಕ್ಷರಸ್ಥರೆನಿಸಿಕೊಂಡವರು ಮಾತ್ರವಲ್ಲ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರೆನಿಸಿಕೊಂಡವರೂ ಅಂಕಿಯಲ್ಲಿ ಬರೆದು ತೋರಿಸಲು ಹೆಣಗಬಹುದು. ಯೋಜನೆ ಮುಗಿಯುವ ಹೊತ್ತಿಗೆ.....?! ಒಂದುಕಡೆ ಏರುತ್ತಿರುವ ಜನಸಂಖ್ಯೆಗೆ ಆಹಾರ ವೊದಗಿಸುವುದೇ ಭಾರತಕ್ಕೆ ಸವಾಲಾಗಿ ಪರಿಣಮಿಸಿದೆ. ದೇಶಾದ್ಯಂತ ನೂರಾರು ಯೋಜನೆಗಳು ಅರ್ಥಕ್ಕೇ ನಿಂತಿವೆ. ಇದರ ನಡುವೆ ಅತೀವೃಷ್ಟಿ, ಅನಾವೃಷ್ಟಿ ಮತ್ತಿತರ ಪ್ರಕೃತಿ ವಿಕೋಪಗಳು ದೇಶವನ್ನು ಕಾಡುತ್ತಿರುವಾಗ ನದಿ ಜೋಡಣೆಯಂಥ ಭಾರೀ ಬಂಡವಾಳ ಹೂಡುವ ಯೋಜನೆಗಳನ್ನು ಕೈಗೆತ್ತಿಕೊಂಡರೆ ಪೂರ್ಣಗೊಳಿಸುವ ಶಕ್ತಿ ಭಾರತಕ್ಕಿದೆಯೇ ಎನ್ನುವಂಥ ಪ್ರಶ್ನೆಗಳು ಎದುರಾಗುತ್ತವೆ. ಇಂಥ ಯೋಜನೆಗಳಿಗೆ ವಿಶ್ವಬ್ಯಾಂಕಿನಿಂದ ಸಾಲ ತರಲು ಸರಕಾರ ಮುಂದಾದರೂ ಅದರ ವಾರ್ಷಿಕ ಬಡ್ಡಿಯನ್ನು ಗಮನಿಸಿದರೆ ನಿಜಕ್ಕೂ ದೇಶವನ್ನೇ ವಿಶ್ವಬ್ಯಾಂಕಿಗೆ ಅಡವಿಡುವ ಅನುಭವವಾಗುತ್ತದೆ. ಅಂದರೆ ಅದರ ವಾರ್ಷಕ ಬಡ್ಡಿ ಸರಿಸುಮಾರು ೭೫ ಸಾವಿರ ಕೋಟಿ ರೂಪಾಯಿಗಳು!
ಈಗಾಗಲೇ ಅಸಮಾನತೆಗಳ ಬೇಗೆಯಲ್ಲಿ ಬೇಯುತ್ತಿರುವ ಭಾರತಕ್ಕೆ ಇದು ಸಣ್ಣ ಪ್ರಮಾಣದ ಹಣವಲ್ಲ. ಇದನ್ನು ಭರಿಸಲು ಮತ್ತೆ ಯಾವ್ಯಾವುದೋ ದಾರಿಗಳಲ್ಲಿ ತೆರಿಗೆ ಸಂಗ್ರಹಿಸಬೇಕಾಗಬಹುದು. ಇಷ್ಟು ವೆಚ್ಚಮಾಡಿ ಮಾಡಲಾಗುವ ಯೋಜನೆಯಿಂದ ಒದಗುವ ನೀರು ಹಾಗೂ ಶಕ್ತಿಯನ್ನು ರೈತರಿಗೆ ಹಾಗೂ ಉದ್ಯಮಿಗಳಿಗೆ ನಿಲುಕದ ಬೆಲೆಯಲ್ಲಿ ಕೊಡಬೇಕಾಗುತ್ತದೆ. ನಾನು ಮೊದಲೇ ಹೇಳಿದಂತೆ ‘ನೀರಿನ ವ್ಯಾಪಾರೀಕರಣ’ ಅದು ಇಂಥ ಸಂದರ್ಭಗಳಲ್ಲಿ ಕೈಗೂಡುತ್ತದೆ. ಈ ರೀತಿಯ ಸನ್ನಿವೇಶಗಳಲ್ಲಿ ದೇಶದ ಜನತಂತ್ರಕ್ಕೆ, ಸಮಗ್ರತೆಗೆ ಪೆಟ್ಟು ಬೀಳುತ್ತದೆ. ನೀರು ಸರಬರಾಜಿಗೆ (ಮಾರಾಟಕ್ಕೆ) ಸರಕಾರ ವ್ಯವಸ್ಥೆ ಮಾಡಲಾಗದೆ ಖಾಸಗಿ ದಲ್ಲಾಳಿಗಳಿಗೆ ವಹಿಸಬೇಕಾಗುತ್ತದೆ. ಆಗ ಸಾಮಾಜಿಕ ಘರ್ಷಣೆಗಳು, ದಬ್ಬಾಳಿಕೆಗಳು ಪ್ರಾರಂಭವಾಗುತ್ತವೆ. ಈಗಾಗಲೇ ಬಹುರಾಷ್ಟ್ರೀಯ ಕಂಪನಿಗಳು ವಿಶ್ವವಿದ್ಯಾಲಯಗಳಲ್ಲಿ ಲಾಬಿ ನಡೆಸಿ ನೀರನ್ನು ‘ಮಾನವ ಹಕ್ಕು’ ಎಂದಿದ್ದುದನ್ನು ‘ಮಾನವ ಅಗತ್ಯ’ ಎಂದು ಬದಲಾಯಿಸಿವೆ. ಅಂದರೆ ಅಗತ್ಯ ವಸ್ತುಗಳ ಸಾಲಿನಲ್ಲಿ ನಿಲ್ಲಿಸುವುದರ ಹಿಂದಿನ ಉದ್ದೇಶವೇ ಮಾರಾಟ! ಅಗತ್ಯ ವಸ್ತುಗಳ ಸಾಲಿನಲ್ಲಿರುವುದು ಮನುಷ್ಯ ಖರೀದಿಸಲೇಬಾಕಾಗುತ್ತದೆ ಎಂಬ ಸೂಕ್ಷ್ಮ ಒತ್ತಾಯ ಇದು. ಇದೇ ಖಾಸಗೀಕರಣದ ಮಜಲು.
ಹೆಚ್ಚುತ್ತಿರುವ ತಾಪಮಾನ:
‘ಮಳೆಗಾಲದಲ್ಲಿ ಅನೇಕ ನದಿಗಳು ತುಂಬಿ ಹರಿದು ಲಕ್ಷಾಂತರ ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರಕ್ಕೆ ಸೇರುತ್ತದೆ’ ಎಂದು ಇದನ್ನು ಒಪ್ಪಿಕೊಳ್ಳುವವರ ವಾದ. ಇವೇ ನಿಜವಾದ ಪರಿಸರ ವಿರೋ ಆಲೋಚನೆಗಳು. ಸಮದ್ರಕ್ಕೂ ಮತ್ತು ನದಿಗಳಿಗೂ ಒಂದು ಜೈವಿಕ ಸಂಬಂಧವಿದೆ. ನದಿಗಳ ಸಿಹಿ ನೀರು ಹರಿದರೂ ಸಮುದ್ರದಲ್ಲಿ ಉಪ್ಪಾಗುತ್ತದೆ. ಆದರೆ ಸಮುದ್ರದಲ್ಲಿ ಭಾರೀ ಪ್ರಮಾಣದಲ್ಲಿ ಉಪ್ಪು ನೀರಿರುವುದರಿಂದ ಅಲ್ಪ ಪ್ರಮಾಣದ ಸಿಹಿ ನೀರು ಸೇರಿದರೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಾದ ಮಂಡಿಸಬಹುದು. ಆದರೆ ಸಿಹಿ ನೀರು ಸೇರದೇ ಹೋದರೆ ಎಂಥ ಪರಿಣಾಮ ವಾಗಬಹುದು ಎಂಬ ಬಗ್ಗೆಯೂ ಎಚ್ಚರ ಅಗತ್ಯ. ನದಿಗಳು ಹರಿಯುವುದರಿಂದ ಭೂಮಿಯಲ್ಲಿನ ಖನಿಜಾಂಶ ಸಾಗರಕ್ಕೆ ಸೇರುತ್ತದೆ. ಸಾಗರ ಗರ್ಭದ ಜೀವಿಗಳ ಆಹಾರಕ್ಕೆ ಇದೇ ಮೂಲ. ಇದನ್ನೆ ತಡೆದರೆ ಸಮುದ್ರದ ಜೀವಿಗಳಿಗೆ ಆಹಾರದ ಕ್ಷಾಮ ತಲೆದೂರಬಹುದು. ಜೀವಕೋಶಗಳ ಉಗಮವಾಗಿರುವುದೇ ಸಾಗರದ ಗರ್ಭದಿಂದ ಎನ್ನುವುದನ್ನು ನಾವು ಮರೆಯಬಾರದು. ಸಾಗರದಲ್ಲಿರುವ ಸಣ್ಣ ಸಣ್ಣ ಜೀವಿಗಳು ಬಹಳ ಮುಖ್ಯ. ಅವು ಕ್ಯಾಲ್ಸಿಯಂ ಕಾರ್ಬೋನೇಟನ್ನು ಉತ್ಪಾದಿಸಿ ಇಂಗಾಲಾಮ್ಲವನ್ನು ಹೀರಿಕೊಳ್ಳುತ್ತವೆ. ಸಾಗರ ಅನೇಕ ಸಣ್ಣ ಸಣ್ಣ ಜೀವಿಗಳಿಂದ ತುಂಬಿದೆ. ಜೀವವಿಕಾಸವನ್ನು ಗಮನಿಸಿದರೆ ಸಾಗರದ ಸಸ್ಯಗಳು, ಜೀವಿಗಳು ತೀರಾ ಹಳೆಯವು. ಹೀಗಾಗಿ ಅವುಗಳಿಗೆ ಪ್ರಾಮುಖ್ಯತೆ ಹೆಚ್ಚು. ಸಾಗರದ ಜೀವಿಗಳ ಆಹಾರ ಸರಪಳಿಯನ್ನೇ ತುಂಡಾಗಿಸಿದರೆ ಮುಂದೊಂದು ದಿನ ಬತ್ತಿದ ಸಾಗರವನ್ನು ನೋಡಬೇಕಾಗುತ್ತದೆ.
ಮಳೆಯ ಪ್ರಮಾಣ ಕಡಿಮೆ ಮತ್ತು ಭೂಮಿಯ ಮೇಲೆ ಬಿಸಿ ಹವೆ ಹೆಚ್ಚುತ್ತಿದ್ದು, ಇಂಗಾಲದಿಂದ ಜಗತ್ತು ಕಲುಷಿತಗೊಂಡಿರುವುದು ಈಗಾಗಲೇ ದೃಢಪಟ್ಟಿದೆ. ಅದರ ನಿಯಂತ್ರಣಕ್ಕೆ ತುರ್ತು ಕ್ರಮ ಅನಿವಾರ್ಯ. ೨೦೧೨ರ ಹೊತ್ತಿಗೆ ವಾಯುಮಾಲಿನ್ಯ, ಜಲಮಾಲಿನ್ಯ ನಿಯಂತ್ರಣಕ್ಕೆ ಸರಿಯಾದ ಮಾರ್ಗಸೂಚಿಗಳನ್ನು ರೂಪಿಸದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ ಎಂದು ಸೂಚನೆ ನೀಡಲಾಗುತ್ತಿದೆ. ಇದಕ್ಕಾಗಿ ಭೂಮಿಗೆ ನೀರಿಂಗಿಸಲು ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಅಮೆರಿಕದಂಥ ಶ್ರೀಮಂತ ದೇಶಗಳು ೨೦೦೫ರವರೆಗೂ ಇಂಥ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಇದರಿಂದ ಅಭಿವೃದ್ಧಿಶೀಲ ದೇಶಗಳು ಕೂಡ ಇದನ್ನು ನಿರ್ಲಕ್ಷಿಸುತ್ತಲೇ ಬಂದದ್ದು ಪರಿಸ್ಥಿತಿ ಇಷ್ಟೊಂದು ಜಟಿಲವಾಗಿದೆ. ಇವೆಲ್ಲವನ್ನು ಗಮನಿಸಿದರೆ ಭೂಮಿ ಮನುಷ್ಯ ವಾಸಿಸಲು ಯೋಗ್ಯವಲ್ಲ ಎನ್ನುವಂತಾಗಿದೆ.
ನಮ್ಮ ನದಿಗಳು ಬರೀ ಪ್ರವಾಹ ಪ್ರೀಡಿತಮಾತ್ರವಾಗಿಲ್ಲ ಸಾಕಷ್ಟು ಮಲೀನವೂ ಆಗಿವೆ. ಈ ಜೋಡಣೆ ಎಂದರೆ ರಾಷ್ಟ್ರದಾದ್ಯಂತ ಮಾಲಿನ್ಯದ ಜೋಡಣೆಯೇ ಆಗಬಹುದು. ಗಂಗಾನದಿಯ ಅಪಾರ ಪ್ರಮಾಣದ ಮಲೀನ ನೀರು ಕಾವೇರಿ ಅಥವಾ ತುಂಗಭದ್ರಾ ಸೇರಿದರೆ ಅದು ಹರಿಯುವ ಊರುಗಳಲ್ಲೆಲ್ಲಾ ಸಾಂಕ್ರಾಮಿಕ ರೋಗಗಳು ಹರಡಬಹುದು. ಇಂಥ ಕ್ರಮಗಳಿಂದ ರೋಗ ರುಜಿನಗಳು ಮತ್ತಷ್ಟು ಹೆಚ್ಚಿದರೆ ದೇಶವೇ ಆಸ್ಪತ್ರೆಯಾಗುವ ಸಾಧ್ಯತೆಗಳನ್ನೂ ಗಮನಿಸಬೇಕು. ಆದ್ದರಿಂದ ಎರಡು ಅಥವಾ ಮೂರು ಸಣ್ಣ ನದಿಗಳನ್ನು ಪ್ರಾಯೋಗಿಕವಾಗಿ ಜೋಡಿಸಿ ಅದರ ಎಡಬಲಗಳನ್ನು ಪರೀಕ್ಷೆ ಮಾಡಬೇಕು ಅದರ ಫಲಿತಾಂಶದ ಮೇಲೆ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಬೇಕು. ಕಾರಣವಿಷ್ಟೆ ವಿಶ್ವದಲ್ಲಿ ಇಷ್ಟೊಂದು ದೊಡ್ಡ ಯೋಜನೆಗಳನ್ನು ಯಾವ ರಾಷ್ಟ್ರವೂ ರೂಪಿಸಿಲ್ಲ ಮತ್ತು ಯಶಸ್ವಿಯೂ ಆಗಿಲ್ಲವಾದ್ದರಿಂದ ಬಡ ಭಾರತದ ಮೇಲೆ ಇದನ್ನು ಒತ್ತಾಯ ಪೂರ್ವಕವಾಗಿ ಹೇರುವುದು ಸಲ್ಲ.
ಪರ್ಯಾಯ ಚಿಂತನೆ:
ಜೈವಿಕ ಕೊಂಡಿಯನ್ನು ಜೋಡಿಸುವ ಹುಚ್ಚು ಸಾಹಸಕ್ಕೆ ಮನುಷ್ಯ ಕೈ ಹಾಕಬಾರದು. ಹಕ್ಕಿ, ಹಾವು, ಸಿಂಹ ಎಲ್ಲ ಪ್ರಾಣಿಗಳೂ ತಮ್ಮ ಆಹಾರವನ್ನು ತಾವೇ ಬೇಟಿಯಾಡಿಕೊಳ್ಳುತ್ತವೆ ಅದನ್ನು ಬಿಟ್ಟು ನಾವು ಅವುಗಳಿಗೆ ಆಹಾರ ನೀಡತೊಡಗಿದರೆ ಅವುಗಳಲ್ಲಿ ಬೇಟೆಯಾಡುವ, ತಮ್ಮ ಆಹಾರವನ್ನು ತಾವೇ ಸೃಷ್ಟಿಸಿಕೊಳ್ಳುವ ಕ್ರಮವೇ ಮರೆತು ಹೋಗಬಹುದು. ಹಾಗೆಯೇ ನದಿ ಜೋಡಣೆಯೂ ಕೂಡ. ಅಕಸ್ಮಾತ್ ನದಿಗಳು ಜೋಡಣೆಯಾಗಬೇಕೆಂದಿದ್ದರೆ ಅವೇ ನೈಸರ್ಗಿಕವಾಗಿ ಆಗುತ್ತವೆ. ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಎರಡು ಪ್ರಮುಖ ನದಿಗಳಾದ ತುಂಗ-ಭದ್ರಾ ಶಿವಮೊಗ್ಗ ಬಳಿ ಕೂಡ್ಲಿಯಲ್ಲಿ ಒಂದಾಗಿ ಮುಂದೆ ಸಾಗಿಲ್ಲವೇ? ಹಾಗೆಯೇ ಇದೇರೀತಿ ಅರ್ಕಾವತಿ ನದಿ ಕಾವೇರಿ ಸೇರುವುದಿಲ್ಲವೆ? ಅನೇಕ ನದಿಗಳು ತಾವೇ ಜೋಡಿಯಾಗಿ ಹರಿದ ಉದಾಹರಣೆಗಳಿವೆ. ಇದೇ ಜೈವಿಕ ಕ್ರಿಯೆ. ಇದು ಮಾನವ ನಿರ್ಮಿತವಾದರೆ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇದಕ್ಕೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವುದು ಅಗತ್ಯ. ಮಳೆ ನೀರಿನ ಕೊಯ್ಲನ್ನು ಗುಜರಾತ್ ಮೊದಲಾದ ರಾಜ್ಯಗಳು ಬಹಳ ಹಿಂದೆಯೇ ಜಾರಿಗೆ ತಂದು ಯಶಸ್ವಿಯಾಗಿವೆ. ರಾಜಸ್ತಾನದಂಥ ಮರಳುಗಾಡಿನಲ್ಲಿ ರಾಜೇಂದ್ರಸಿಂಗ್ ಅಂಥವರು ಬತ್ತಿಹೋದ ನದಿಗಳಿಗೆ ಮರು ಜೀವ ನೀಡಿ ಬಿರುಬೇಸಿಗೆಯಲ್ಲೂ ಹರಿಯುವಂತೆ ಮಾಡಿದ್ದಾರೆ. ಇದೇ ರೀತಿಯಲ್ಲಿ ಸಣ್ಣ ಪ್ರಮಾಣದ ಕೆಲಸಗಳು ಕರ್ನಾಟಕದಲ್ಲೂ ನಡೆದಿವೆ ಅಂಥವುಗಳನ್ನು ಪ್ರೋತ್ಸಾಹಿಸಿ ನೀರಿನ ಸಮೃದ್ಧಿಗೆ ಪ್ರಯತ್ನಿಸಿದರೆ ಯಶಸ್ವಿಯಾಗಲು ಸಾಧ್ಯವಿದೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕಿದೆ.
ಬಯಲು ನಾಡು ಚಿತ್ರದುರ್ಗದಲ್ಲೂ ಇಂಥ ಪ್ರಯತ್ನಗಳು ನಡೆದಿವೆ. ಕೋಲಾರದಲ್ಲಿ ಇಂಥ ಪ್ರಯತ್ನಗಳಾಗಬೇಕಿದೆ. ನೇತ್ರಾವತಿ ನೀರನ್ನು ಕೋಲಾರಕ್ಕೆ ಹರಿಸಬೇಕೆನ್ನುವ ಒತ್ತಾಯ ತಪ್ಪಲ್ಲ ಆದರೆ ಕೋಲಾರ ಜಿಲ್ಲೆಯಲ್ಲಿ ಇರುವಷ್ಟು ಕೆರೆಗಳು ಬಹುಶಃ ದೇಶದ ಯಾವುದೇ ಜಿಲ್ಲೆಯಲ್ಲಿ ಇರಲಾರವು ಆದರೆ ಅನೇಕ ಕೆರೆಗಳು ಒತ್ತುವರಿಯಾಗಿವೆ ಕೆಲವಕ್ಕೆ ನೀರು ಹರಿದುಬರುವ ಮಾರ್ಗಗಳನ್ನೇ ಒತ್ತುವರಿ ಮಾಡಲಾಗಿದೆ. ಬೆಳೆಸಿರುವ ನೀಲಗಿರಿ ನೆಡುತೋಪುಗಳು ನಮ್ಮ ಜೈವಿಕ ಅರಣ್ಯವನ್ನೇ ನಾಶಮಾಡಿವೆ. ನೀಲಗಿರಿಯಿಂದ ಅಂತರ್ಜಲ ಪೂರ್ಣ ಬತ್ತಿಹೋಗಿ ಕೆರೆಗಳು ಖಾಲಿಯಾಗಿಬೆಂಗಾಡು ಮಾತ್ರ ನಮಗೆ ಕಾಣುತ್ತಿದೆ. ನಮ್ಮ ಅಕಾರಿ ವಲಯದಲ್ಲಿ ಒಂದು ಮೂರ್ಖ ಕಲ್ಪನೆಯಿದೆ ಅದೇನೆಂದರೆ ನಿರಾವರಿ ಇಲಾಖೆಗೂ ಅರಣ್ಯ ಇಲಾಖೆಗೂ ಸಂಬಂಧವೇ ಇಲ್ಲ ಎನ್ನುವಂಥದ್ದು. ನೀರಾವರಿ ಇಲಾಖೆಯವರು ಜಲಮರುಪರಿಪೂರ್ಣದಂಥ ಯೋಜನೆಗಳನ್ನು ರೋಪಿಸುತ್ತಿದ್ದರೆ ಅರಣ್ಯ ಇಲಾಖೆಯವರು ನೀಲಗಿರಿ ನೆಳೆಯುತ್ತ ಅಂತರ್ಜಲ ನಾಶ ಮಾಡುವ ಕೆಲಸಗಳಲ್ಲಿ ಮುಂದಾಗಿದ್ದಾರೆ. ಆದ್ದರಿಂದ ಈ ಎರಡೂ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕಾದ ಅನಿವಾರ್ಯತೆ ತುಂಬಾ ಇದೆ. ನೀಲಗಿರಿ ನೆಟ್ಟು ಎರಡು ವರ್ಷಗಳಲ್ಲಿ ಅದು ಬೆಳೆದದ್ದನ್ನು ಮಂತ್ರಿಗಳಿಗೆ ತೋರಿಸಿ ಬಡ್ತಿ ಬಯಸುವ ಅರಣ್ಯ ಅಕಾರಿಗಳು ಎಲ್ಲೆಂದರಲ್ಲಿ ನೀಲಗಿರಿ, ಅಕೇಶಿಯಾದಂಥ ನೆಡುತೋಪುಗಳನ್ನು ನಿರ್ಮಿಸುತ್ತಿದ್ದಾರೆ. ಇದರಿಂದ ನಮ್ಮ ಅಂತರ್ಜಲ ಮಟ್ಟ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ನಮ್ಮ ಪರಿಸರಕ್ಕೆ ಹೊಂದಾಣಿಕೆಯಾಗದ ನೀಲಗಿರಿ ಅಕೇಶಿಯಾದಿಂದ ನಮ್ಮ ಪಾರಂಪರಿಕ ಅರಣ್ಯ ಮತ್ತು ನೀರಿನ ಸೆಲೆಗಳು ಬತ್ತುತ್ತಿವೆ ಎಂದು ಪರಿಸರವಾದಿಗಳು ಕಳೆದ ಹತ್ತು ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ ನಮ್ಮ ಅಕಾರಿಗಳು ಮತ್ತೆ ಮತ್ತೆ ಅದೇ ಸಸಿಗಳನ್ನು ನೆಡುತ್ತಲೇ ತಮ್ಮ ಮೂರ್ಖತನವನ್ನು ಒರೆಗೆಹಚ್ಚಿಕೊಳ್ಳುತ್ತಲೇ ಬಂದಿದ್ದಾರೆ. ನಾವು ನಮ್ಮ ಆಡಳಿತ ಯಂತ್ರ ಇಂಥ ವಿಚಾರಗಳಲ್ಲಿ ಬದಲಾದರೆ ಮಾತ್ರ ನೀರಿನ ಸಮಸ್ಯೆಗೆ ಪರ್ಯಾಯ ಮಾರ್ಗಗಳನ್ನು ಮತ್ತು ಶಾಶ್ವತ ಹಾದಿಗಳನ್ನು ಕಂಡುಕೊಳ್ಳಬಹುದು.
ಹಸಿರು ಕಾಣುವುದೆಲ್ಲದೂ ಅರಣ್ಯವಲ್ಲ. ಅರಣ್ಯ ಎಂದರೆ ಸಹಜ ಜೈವಿಕ ಕ್ರಿಯೆಗಳು ನಡೆದು ಸೃಷ್ಟಿಯಾಗಬೇಕು ನೀಲಗಿರಿ ಬೆಳೆಯುವುದರಿಂದ ಇಂಥ ಕ್ರಿಯೆಗಳು ನಡೆಯುವುದಿಲ್ಲ ಮತ್ತು ಅದರ ವಾಸನೆಯಿಂದ ಸಣ್ಣಪುಟ್ಟ ಹುಳುಗಳು ಸಾಯುತ್ತವೆ. ಜಾನುವಾರುಗಳು ಚರ್ಮ ರೋಗದಿಂದ ಬಳಲುತ್ತಿವೆ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ. ಆದರೂ ಅಕಾರಿಗಳು ನೀಲಗಿರಿ ಬೆಳೆಯಲು ವಹಿಸಿದಷ್ಟು ಆಸಕ್ತಿಯನ್ನು ಇತರ ಗಿಡನೆಡಲು ತೋರುತ್ತಿಲ್ಲ ಎನ್ನುವುದು ನಾಚಿಕೆಗೇಡಿನ ವಿಚಾರ. ಕೆರೆಗಳಿಗೆ ನೀರು ಹರಿಸುವ ಮಾರ್ಗಗಳನ್ನು ನಿರ್ಬಂಸದೆ ಮುಕ್ತವಾಗಿ ಬಿಡಬೇಕು, ಜೈವಿಕ ಅರಣ್ಯದ ಅರಿವು ಮೂಡಿಸಬೇಕು. ಕೆರೆಗಳ ಹೂಳು ತೆಗೆಸಿ ವರ್ಷವಿಡೀ ನೀರು ಸಂಗ್ರಹವಾಗುವಂತೆ ನೋಡಿಕೊಳ್ಳಬೇಕು. ಕೆರೆ ಬಾವಿಗಳಲ್ಲಿ ಕಲುಷಿತ ನೀರು ಶೇಕರಣೆಯಾಗದಂತೆ ಕಾಯ್ದುಕೊಳ್ಳಬೇಕು. ಕೃಷಿಗೆ ಅಗತ್ಯವಿರುವಷ್ಟು ನೀರು ಮಾತ್ರ ಬಳಸಿ ಅನಗತ್ಯ ಪೋಲಾಗದಂತೆ ನೋಡಿಕೊಳ್ಳಬೇಕು ಹಾಗಾದರೆ ಮಾತ್ರ ಲಭ್ಯವಿರುವ ನೀರಿನಲ್ಲಿ ಬದುಕು ಅದರಲ್ಲೂ ಶುದ್ದ ಬದುಕು ಕಟ್ಟಿಕೊಳ್ಳಬಹುದು.
ನೀರು ಕಲುಷಿತ:
ಈಗಾಗಲೇ ಭಾರತದಲ್ಲಿ ಕುಡಿಯುವ ನೀರು ಕಲುಷಿತಗೊಂಡಿದೆ ಇದಕ್ಕೆ ಪರಿಸರ ನೈರ್ಮಲ್ಯ ಕಾಪಾಡದಿರುವುದೇ ಕಾರಣ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಜಗತ್ತಿನಾದ್ಯಂತ ಹತ್ತರಲ್ಲಿ ಒಂದು ಕಾಯಿಲೆಗೆ ಮತ್ತು ಶೇಕಡಾ ಆರರಷ್ಟು ಸಾವು ಪ್ರಕರಣಗಳಿಗೆ ಶುದ್ಧ ಕುಡಿಯುವ ನೀರಿನ ಕೊರತೆಯೇ ಕಾರಣ ಎಂದು ೨೦೦೮ರಲ್ಲಿ ಪ್ರಪ್ರಥಮ ಬಾರಿಗೆ ಜಲಮೂಲ ಕಾಯಿಲೆಗಳ ಬಗ್ಗೆ ಅಧ್ಯಯನ ನಡೆಸಿದ ವಿಶ್ವ ಆರೋಗ್ಯ ಸಂಸ್ಥೆಯ ವರದಿ ತಿಳಿಸಿತ್ತು. ‘ಉತ್ತಮ ಆರೋಗ್ಯಕ್ಕಾಗಿ ಶುದ್ಧ ನೀರು’ ಎಂಬ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅದು ಅಧ್ಯಯನ ನಡೆಸಿತ್ತು. ಭಾರತದಲ್ಲಿ ವರ್ಷಕ್ಕೆ ೧.೦೩ ಲಕ್ಷ ಜನ ಸಾಯುತ್ತಾರೆ. ಇಂಥವರಲ್ಲಿ ಶೇ. ೭.೫ರಿಂದ ೭.೮ ರಷ್ಟು ಮಂದಿ ಸಾಯಲು ಕಲುಷಿತ ನೀರೇ ಕಾರಣ ಎಂದು ವರದಿ ತಿಳಿಸಿತ್ತು. ನೀರು ಸಂಬಂತ ಕಾಯಿಲೆಗಳಾದ ಮಲೇರಿಯಾ, ಡೆಂಗೆ ಜ್ವರಕ್ಕೆ ಬಲಿಯಾದವರ ಸಂಖ್ಯೆ ೨೦೦೮ರ ಒಂದೇ ವರ್ಷದಲ್ಲಿ ಹತ್ತೊಂಬತ್ತು ಸಾವಿರ.
ಆರೋಗ್ಯ ಸಂರಕ್ಷಣೆಗಾಗಿ ಏಜೆನ್ಸಿಗಳು ಪ್ರತೀ ವರ್ಷ ಏಳು ಶತಕೋಟಿ ಡಾಲರ್ ಹಾಗೂ ವೈಯುಕ್ತಿಕವಾಗಿ ಜನರು ೩೪೦ ದಶಲಕ್ಷ ಡಾಲರ್ ಖರ್ಚು ಮಾಡುತ್ತಾರೆ. ಕುಡಿಯುವ ನೀರು ಹಾಗೂ ಒಳಚರಂಡಿ ವ್ಯೆವಸ್ಥೆಯನ್ನು ಸರಿಪಡಿಸಿದಲ್ಲಿ ಅನಗತ್ಯ ಆರ್ಥಿಕ ಹೊರೆಯನ್ನು ತಗ್ಗಿಸಬಹುದು. ವಿಶ್ವದಲ್ಲಿ ಶೇ. ೮೮ ರಷ್ಟು ಜನ ಕಲುಷಿತ ನೀರು ಕುಡಿದು ಭೇದಿಗೆ ತುತ್ತಾಗುತ್ತಾರೆ. ಕಲುಷಿತ ನೀರು ಒಂದೆಡೆ ಶೇಕರಣೆಗೊಳ್ಳುವುದರಿಂದ ಷಿಸ್ಟಸಮೈಆಸಿಸ್ ಕಾಯಿಲೆ ಹರಡುತ್ತಿದ್ದು ಒಂದು ವರ್ಷದಲ್ಲಿ ಜಗತ್ತಿನಾದ್ಯಂತ ಇನ್ನೂರು ದಶಲಕ್ಷ ಜನ ಬಳಲುತ್ತಿದ್ದರೆ ಎನ್ನುವುದು ಆಘಾತಕಾರಿ ವಿಚಾರ.
ಕರ್ನಾಟಕವನ್ನೇ ಗಮನದಲ್ಲಿಟ್ಟುಕೊಂಡು ನೋಡುವುದಾದರೆ ರಾಜ್ಯದಲ್ಲಿ ಅಂತರ್ಜಲಮಟ್ಟ ಅಪಾಯಕಾರಿ ಹಂತ ತಲುಪಿದೆ. ಕಳೆದ ಎರಡು ದಶಕಗಳಿಂದೀಚೆಗೆ ಭೂಮಿಯಲ್ಲಿ ಮನಬಂದಂತೆ ಕೊರೆದ ಕೊಳವೆ ಬಾವಿಗಳಿಂದ ದೊರೆತ ಫಲ ಇದು. ರಾಜ್ಯದ ೧೭೫ ತಾಲೂಕುಗಳ ಪೈಕಿ ೬೫ ತಾಲೂಕುಗಳಲ್ಲಿ ಅಂತರ್ಜಲ ದುರ್ಬಳಕೆ ಯಥೇಚ್ಚವಾಗಿ ನಡೆಯುತ್ತಿದೆ. ಕೋಲಾರ, ಬೆಂಗಳೂರು ಗ್ರಾಮಾಂತರ ತುಮಕೂರು ಜಿಲ್ಲೆಗಳಲ್ಲಿ ಅಂತರ್ಜಲದ ದುರ್ಬಳಕೆ ರಾಜ್ಯದಲ್ಲೇ ಅತೀ ಹೆಚ್ಚು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಅಂತರ್ಜಲ ಮಂಡಳಿ (ಸಿಜಿಡಬ್ಲ್ಯೂಟಿ) ಮಳೆಗಾಲದಲ್ಲಿ ಭೂಮಿಗೆ ನೀರು ಇಂಗಿಸುವ ಕಾರ್ಯವನ್ನು ಕಡ್ಡಾಯಗೊಳಿಸಲು ಮುಂದಾಗಿದೆ. ಭೂಮಿಯ ಮೇಲೆ ಮಾನವನ ದಬ್ಬಾಳಿಕೆ ಹೆಚ್ಚಿದಂತೆ ಇಡೀ ವಾತಾವರಣವೇ ಬಿಸಿಯಾಗತೊಡಗಿದೆ. ಈಗ ಅಮೆರಿಕರಂಥ ಶ್ರೀಮಂತ ದೇಶಗಳು ಬಿಸಿಗೆ ತತ್ತರಿಸಿವೆ. ಉತ್ತರ ಭಾರತದಲ್ಲೂ ಉಷ್ಣಾಶ ಹೆಚ್ಚಿದ್ದು ಜನರು ಬಿಸಿ ತಾಳದೆ ಸಾಯುತ್ತಿದ್ದಾರೆ. ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ನೀರಿನಿಂದಲೇ ಆವೃತವಾಗಿರುವ ಭೂಮಿಗೆ ನೀರಿನಕೊರತೆ ಮತ್ತು ಅದರ ಕಲುಷಿತತೆಯೇ ಅಪಾಯ ತಂದೊಡ್ಡುವ ಸಾಧ್ಯತೆಗಳಿವೆ.

No comments: